Monday, February 18, 2019

ಪರೀಕ್ಷೆಯು ಸಂಭ್ರಮವಾಗಲಿ!


ಬೆಸ್ಟ್ ಆಫ್ ಲಕ್ ಎಸ್. ಎಸ್. ಎಲ್. ಸಿ ಮಕ್ಕಳೇ! ಪರೀಕ್ಷೆಯು ಸಂಭ್ರಮವಾಗಲಿ!
ಹರಿಪ್ರಸಾದ್ ಸರ್ ಬರೀತಾರೆ..
ಅರ್ಧಗಂಟೆ ಓದು> ಹತ್ತು ನಿಮಿಷ ಬರೆಹ> ಐದು ನಿಮಿಷ ವಿಶ್ರಾಂತಿ
§ ಸಂತೋಷವಾಗಿದ್ದಾಗ ನಾವು ಹೆಚ್ಚು ಕೆಲಸಮಾಡಬಲ್ಲೆವು§  ಮನಸ್ಸು ಶಾಂತಿಯಿಂದಿರಲಿ!§  ಅರ್ಧಗಂಟೆ ಓದು> ಹತ್ತು ನಿಮಿಷ ಬರೆಹ> ಐದು ನಿಮಿಷ ವಿಶ್ರಾಂತಿ

§  ಎಲ್ಲ ಪ್ರಶ್ನೆಗಳನ್ನೂ ಓದಿಕೊಳ್ಳಿ§  ಕನಿಷ್ಠ 20 ಪ್ರಶ್ನೆಗಳಿಗೆ ಉತ್ತರ ಗೊತ್ತಿದೆಯೆಂದರೆ ಸಂತೋಷಪಡಿ§  ಉಳಿದ ಪ್ರಶ್ನೆಗಳಿಗೆ ಉತ್ತರ ಹೊಳೆಯುತ್ತಾ ಹೋಗುತ್ತದೆ.

Tuesday, February 12, 2019

ಹೀಗಿರಲಿ ಪರೀಕ್ಷಾಪೂರ್ವ ಸಿದ್ಧತೆ

ವಿದ್ಯಾರ್ಥಿಗಳೇ, ವಾರ್ಷಿಕ ಪರೀಕ್ಷೆ ಇನ್ನೇನು ಹತ್ತಿರ ಬಂದೇ ಬಿಟ್ಟಿತು ಎಂಬ ಆತಂಕ ಬಿಟ್ಟುಬಿಡಿ. ಎಸ್‌ಎಸ್‌ಎಲ್‌ಸಿ/ಪಿಯುಸಿ ಓದುತ್ತಿರುವವರು ಮುಂದೇನಾಗಬೇಕು ಎಂಬುದರ ಬಗ್ಗೆ ಕನಸು ಕಟ್ಟಿಕೊಂಡಿರುತ್ತೀರಿ. ಆ ಗುರಿಯನ್ನು ತಲುಪಿ ಯಶಸ್ಸನ್ನು ಕಾಣಬೇಕು ಎಂದು ಹಗಲು– ರಾತ್ರಿ ಕಷ್ಟಪಡುವವರು ನಿಮ್ಮಲ್ಲಿ ಹಲವರು ಇರಬಹುದು. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ ಓದಿನ ಬಗ್ಗೆ ಏಕಾಗ್ರತೆಯನ್ನು ತಂದು ಕೊಡಲು ಹಲವು ಸುಲಭೋಪಾಯಗಳಿವೆ.

l ಯಾರ ಒತ್ತಡಕ್ಕೂ ಮನಸ್ಸನ್ನು ಕೊಡದೆ, ನಿಮ್ಮ ವಿಶ್ವಾಸದ ಕಡೆ ಗಮನ ಕೊಟ್ಟು ಓದಲು ಪ್ರಾರಂಭಿಸಿ. ಓದಿದ ವಿಚಾರ ಮರೆತು ಹೋಗುತ್ತದೆ, ನನ್ನಿಂದ ಸಾಧ್ಯವಿಲ್ಲ ಎಂಬ ಭ್ರಮೆಯಿಂದ ದೂರವಿರಿ. ನೀವು ಇಷ್ಟು ದಿನಗಳೂ ಓದಿದ್ದು, ತರಗತಿಯಲ್ಲಿ ಕೇಳಿಸಿಕೊಂಡಿದ್ದು ಎಲ್ಲವೂ ನಿಮ್ಮ ಮಸ್ತಕದಲ್ಲಿ ಒಂದೆಡೆ ಶೇಖರವಾಗಿದೆ. ಸಮಾಧಾನದ ಮನಸ್ಸಿನಿಂದ ಅವೆಲ್ಲವನ್ನೂ ಸೋಮಾರಿತನ ಮಾಡದೆ, ಅತೀವ ನಂಬಿಕೆಯನ್ನು ಬೆಳೆಸಿಕೊಳ್ಳದೆ ಪುನರ್ ಮನನ ಮಾಡಿ. ತನ್ನಷ್ಟಕ್ಕೇ ಎಲ್ಲವೂ ನೆನಪಿಗೆ ಬರುತ್ತದೆ. ಮುಖ್ಯವಾಗಿ ನಿಮ್ಮಲ್ಲಿ ನಿಮಗೆ ನಂಬಿಕೆ ಇರಬೇಕು.
l ಈ ಸಮಯದಲ್ಲಿ ನಿಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ನಿಮ್ಮ ನಿನ್ನೆಯ ಶಕ್ತಿಯನ್ನು ಇವತ್ತಿಗೆ ಹೋಲಿಕೆ ಮಾಡಿಕೊಳ್ಳಿ. ಆತ್ಮಸ್ಥೈರ್ಯ ತಾನಾಗೇ ಬೆಳೆಯುತ್ತದೆ.
l ಒಂದು ದಿನಕ್ಕೆ ಒಂದು ಪಠ್ಯವನ್ನು  ಓದಿ. ಓದುವಾಗ ಪೆನ್ಸಿಲ್‌ನಿಂದ ಮುಖ್ಯವಾದ ಅಂಶ, ಸೂತ್ರ, ಘಟನೆಗಳ ಇಸವಿಗಳನ್ನು ಗುರುತು ಮಾಡಿಕೊಳ್ಳಿ. ಇದನ್ನು ಬೆಳಗಿನ ಜಾವವೇ ಮಾಡಿ.
l ಸಾಯಂಕಾಲ ಬೆಳಿಗ್ಗೆ ಓದಿದ ಪಠ್ಯದ ಪ್ರಶ್ನೆಗಳಿಗೆ ಉತ್ತರಿಸಿ. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸುವುದರಿಂದ, ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು ಎಂಬ ಬಗ್ಗೆ ಸಮಗ್ರ ಚಿತ್ರಣ ಸಿಗುತ್ತದೆ ಹಾಗೂ 3 ಗಂಟೆಯ ಅವಧಿಯಲ್ಲೇ ಉತ್ತರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತೀರಿ. ಯಾವ ಪ್ರಶ್ನೆಗೆ ಎಷ್ಟು ಸಮರ್ಪಕ ಉತ್ತರ ಬರೆಯಬೇಕು ಎಂಬ ಮಾಹಿತಿಗಳೂ ಸಿಗುತ್ತವೆ.
l ಯಾವ ಪಠ್ಯದಲ್ಲಿ ಯಾವ ಅಧ್ಯಾಯವು ಸ್ವಲ್ಪ ಕಷ್ಟವೆನಿಸುತ್ತದೆಯೋ ಅದರ ಬಗ್ಗೆ ಹೆಚ್ಚಿನ ಗಮನವಿಟ್ಟು ಪುನರಾವರ್ತಿ ಓದಿ. ತಿಳಿಯದಿದ್ದಲ್ಲಿ ಶಿಕ್ಷಕರ ಮೂಲಕ ತಿಳಿದುಕೊಳ್ಳಿ. ಕಷ್ಟ ಎಂದು ಬಿಡಬೇಡಿ. ಅದರಲ್ಲಿ ಬರುವ ಒಂದು ಅಂಕದ ಪ್ರಶ್ನೆಯ ಉತ್ತರವೂ ಬಹಳ ಮುಖ್ಯ.
l ಪರೀಕ್ಷೆಯ ಹಿಂದಿನ ದಿನ ಹೊಸದಾಗಿ ಏನನ್ನೂ ಓದಲು ಪ್ರಯತ್ನಿಸದಿರಿ.
ಸುಲಭ ಪ್ರಶ್ನೆಗೆ ಮೊದಲು ಉತ್ತರ
ಪರೀಕ್ಷಾ ಕೊಠಡಿಗೆ ಮೊದಲನೇ ದಿನ ಅರ್ಧಗಂಟೆ ಮುಂಚಿತವಾಗಿ ಹೋಗಿ ನಿಮ್ಮ ಸ್ಥಾನವನ್ನು ಅಲಂಕರಿಸಿ ಸಮಾಧಾನ ಚಿತ್ತದಿಂದ ಪ್ರಶ್ನೆಪತ್ರಿಕೆಯನ್ನು ಪಡೆಯಲು ಉತ್ಸುಕರಾಗಿರಿ. ಮೊದಲು ಗೊತ್ತಿರುವ, ಸುಲಭವಾದ ಪ್ರಶ್ನೆಗಳನ್ನು ಉತ್ತರಿಸಿ. ನಂತರ ಕಷ್ಟ ಎನಿಸಿದ ಪ್ರಶ್ನೆಗೆ ಒತ್ತಡ ಕಡಿಮೆಯಾಗಿ ಮನಸ್ಸು ತನ್ನಷ್ಟಕ್ಕೆ ನಿಮಗೆ ಅರಿವಿಲ್ಲದಂತೆ ದಾರಿ ಮಾಡಿಕೊಡುತ್ತದೆ.
ಚಂದದ ಬರವಣಿಗೆಯೂ ಒಂದು ಕಲೆ. ಇದು ಅಭ್ಯಾಸದಿಂದ ಬರುವ ಒಂದು ಕಲಾಶಕ್ತಿ. ಪರೀಕ್ಷೆಯಲ್ಲಿ ಹಾಳೆಗಳನ್ನು ತುಂಬಿಸಬೇಕೆಂದು ದಪ್ಪದಪ್ಪವಾಗಿ ಅಕ್ಷರಗಳನ್ನು ಬರೆಯುವುದು ಬೇಡ. ಸಹಜ ರೀತಿಯಲ್ಲಿ ಇರಲಿ ನಿಮ್ಮ ಬರವಣಿಗೆ. ಅತಿ ಶೀಘ್ರವೂ ಬೇಡ ಅತಿ ನಿಧಾನಗತಿಯೂ ಬೇಡ. ನಿಮ್ಮ ಬರವಣಿಗೆ ಮತ್ತೊಬ್ಬರಿಗೆ ಓದಲು ಸಾಧ್ಯವಾಗುವಂತಿರಬೇಕು. ಕಾಗುಣಿತ, ಅಕ್ಷರಗಳು ತಪ್ಪಿಲ್ಲದೇ ಬರೆದರೆ ಅರ್ಧ ಪರೀಕ್ಷೆ ಗೆದ್ದಂತೆ.
ವಿಜ್ಞಾನ, ಗಣಿತದ ಪರೀಕ್ಷೆಗಳಲ್ಲಿ ಸೂತ್ರಗಳನ್ನು ಬರೆಯುವುದು, ಹಂತ ಹಂತವಾಗಿ ಲೆಕ್ಕಗಳನ್ನು ಬಿಡಿಸುವುದನ್ನು ಮೌಲ್ಯಮಾಪಕರು ನಿರೀಕ್ಷಿಸುತ್ತಾರೆ. ನೀವು ಬರೆದು ಮುಗಿಸಿದ ಉತ್ತರಗಳನ್ನು ಮತ್ತೊಮ್ಮೆ ಪರಿಶೀಲಿಸಿ. ಆದರೆ ಅದರ ಮರಣೋತ್ತರ ಪರೀಕ್ಷೆ ಮಾಡಬೇಡಿ. ಸಮರ್ಪಕವಾದ ಉತ್ತರಕ್ಕೆ ಸರಿಯಾದ ಅಂಕ ಸಿಕ್ಕೇ ಸಿಗುತ್ತದೆ. ಈಗಲೇ ಆ ಆತಂಕಬೇಡ.
ಪ್ರಶ್ನೆಗಳನ್ನು ಸರಿಯಾಗಿ ಒಂದಲ್ಲ ಎರಡು ಬಾರಿ ಓದಿ, ಅಲ್ಲಿರುವ ಮಾರ್ಗದರ್ಶನದ ಸೂಚನೆಗಳಂತೇ ಅಂಕಕ್ಕೆ ತಕ್ಕಂತೆ ಉತ್ತರಿಸಿ. ಇದು ನಿಮಗೆ ಸಮಯದ ಹತೋಟಿ ತಂದು ಕೊಡುತ್ತದೆ. ಒಂದು ಪ್ರಶ್ನೆಗೆ ಉತ್ತರಿಸಿದ ನಂತರ ಮತ್ತೊಂದು ಪ್ರಶ್ನೆಯ ಉತ್ತರಕ್ಕೆ ಒಂದು ಗೆರೆಯನ್ನು ಎಳೆಯಿರಿ.
ಆ ಮೂರೂ ಗಂಟೆಗಳ ಕಾಲವೂ ಪ್ರಶ್ನೆಪತ್ರಿಕೆಯೊಂದಿಗೆ ನಿಮ್ಮ ಒಡನಾಟ ಸಮಚಿತ್ತದಿಂದ ಇರಲಿ. ಆಗಲೇ ತಿಳಿಸಿದಂತೆ ಸುಲಭ ಪ್ರಶ್ನೆಗಳನ್ನು ಮೊದಲು ಉತ್ತರಿಸುವುದರಿಂದ ಆತ್ಮವಿಶ್ವಾಸ ಹೆಚ್ಚಿ ಕಷ್ಟದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮನಸ್ಸು ಸಹಕರಿಸುತ್ತದೆ. ಪರೀಕ್ಷಾ ಕೊಠಡಿಯಲ್ಲಿ ಬೇರೊಬ್ಬ ವಿದ್ಯಾರ್ಥಿ ಹೆಚ್ಚುವರಿ ಶೀಟ್‌ ಕೇಳಿದಾಕ್ಷಣ ನೀವು ಅದರ ಬಗ್ಗೆ ಆತಂಕದಿಂದ ನಿಮ್ಮ ಗಮನವನ್ನು ಬೇರೆಡೆಗೆ ಹರಿಸುವುದು ಬೇಡ. ನಿಮ್ಮ ಸಾಧನೆ ನಿಮ್ಮ ಪ್ರಯತ್ನ ನಿಮ್ಮದೇ ಹೊರತು ಬೇರೆಯವರದಾಗಿರುವುದಿಲ್ಲ.
ಒಂದು ವೇಳೆ ಆತಂಕದಿಂದ ಅಥವಾ ಭಯದಿಂದ ಗಂಟಲು ಒಣಗಿದಂತಾದರೆ ತಕ್ಷಣವೇ ನೀರು ಕುಡಿಯಿರಿ. ಆಮ್ಲಜನಕದ ಸಹಾಯದಿಂದ ಮನಸ್ಸು ಪುನಃ ಚುರುಕುಗೊಂಡು ಉತ್ತರಿಸಲು ಸಹಕರಿಸುತ್ತದೆ. ಮೂರು ಗಂಟೆಗಳ ಸಂಪೂರ್ಣ ಅವಧಿಯನ್ನು ಉಪಯೋಗಿಸಿಕೊಳ್ಳಿ. ಒಂದು ವೇಳೆ ಬೇಗನೇ ಉತ್ತರಿಸಿದ್ದಾದರೆ ಬರೆದ ಉತ್ತರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ.
ಪರೀಕ್ಷಾ ದಿನಗಳಂದು ಯಾವ ಸ್ನೇಹಿತರೊಡನೆಯೂ ಅಂದಿನ ಪರೀಕ್ಷೆಯ ಬಗ್ಗೆ ಚರ್ಚಿಸದೇ ಇರುವುದು ಒಳ್ಳೆಯದು. ನಿಮ್ಮ ಓದು ನಿಮ್ಮ ಸಾಮರ್ಥ್ಯವನ್ನು ಅವಲಂಬಿಸಿದೆಯೇ ಹೊರತು ಮತ್ತೊಬ್ಬರದಲ್ಲ. ಪ್ರತಿ ನಿತ್ಯ ಒಂದು ಪರೀಕ್ಷೆ ಮುಗಿದು ಮನೆಗೆ ಹೋದ ಮೇಲೆ ಸ್ವಲ್ಪ ವಿಶ್ರಾಂತಿ, ವಾಯುವಿಹಾರ ಮಾಡಿ ನಂತರದ ಪರೀಕ್ಷೆಯ ಪಠ್ಯವನ್ನು ಓದಲು ಪ್ರಾರಂಭಿಸಿ. ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಸಂಗೀತವನ್ನು ಪಠಿಸುವುದು ಅಥವಾ ಕೇಳುವುದರಿಂದ ಮನಸ್ಸು ಉಲ್ಲಾಸಭರಿತವಾಗುತ್ತದೆ.
ಪೋಷಕರಿಗೆ ಕಿವಿ ಮಾತು
ನಿಮ್ಮ ಮಕ್ಕಳಲ್ಲಿ ಆತಂಕದ ಬದಲು ಆತ್ಮವಿಶ್ವಾಸವನ್ನು ತುಂಬಿ. ಶಿಕ್ಷಕರು ಮತ್ತು ಪೋಷಕರಲ್ಲದೆ ಬೇರೆ ಯಾರೂ ಈ ಶಕ್ತಿಯನ್ನು ತುಂಬಲಾರರು. ಪರೀಕ್ಷೆ ಸಮಯದಲ್ಲಿ ನೀವಾಡುವ ಮಾತು, ನೀಡುವ ಸಹಕಾರದಿಂದ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಭಾವನೆಗಳು ಗಟ್ಟಿಯಾಗುತ್ತವೆ. ಇದರಿಂದಲೇ ಅವರು ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗುವುದು. ಈಗಿನ ಮಕ್ಕಳಿಗೆ ಪದೇ ಪದೇ ಓದು ಎಂದು ಹೇಳಿಸಿಕೊಳ್ಳುವುದು ತುಂಬಾ ಮುಜುಗರ ಕೊಡುತ್ತದೆ. ನಿಮ್ಮ ಬಾಲ್ಯ ಜೀವನದ ಘಟನೆಗಳನ್ನು ಇಂದಿನ ನಿಮ್ಮ ಮಕ್ಕಳೊಡನೆ ಹೋಲಿಸಬೇಡಿ. ಕಾಲ ಬದಲಾಗಿದೆ. ನೀವೂ ಪರಿವರ್ತನೆ ಹೊಂದಲೇಬೇಕು. ಯಾವುದೇ ವಿದ್ಯಾರ್ಥಿ ಪರೀಕ್ಷೆಗೆ ಹೋಗುತ್ತಿದ್ದಾನೆಂದರೆ ಅವರೊಂದಿಗೆ ಒತ್ತಡದ ಮಾತುಗಳಿಗಿಂತ ಪ್ರೋತ್ಸಾಹದ ಮಾತನ್ನಾಡಿ. ಅದು ಅವರ ಆಂತರಿಕ ಏಕಾಗ್ರತೆ ಹಾಗೂ ಆತ್ಮವಿಶ್ವಾಸವನ್ನು ಚುರುಕುಗೊಳಿಸುತ್ತದೆ.
ಪರೀಕ್ಷೆಯ ದಿನಗಳಂದು ಅವರೊಡನೆ ನಗುತ್ತಾ ಮಾತನಾಡಿಸಿ. ಅವರ ಹಾಲ್ ಟಿಕೆಟ್, ಪೆನ್, ಪೆನ್ಸಿಲ್, ವಾಟರ್ ಬಾಟಲ್ ಇವುಗಳನ್ನು ಜೋಡಿಸಿಕೊಳ್ಳುವುದರಲ್ಲಿ ಸಹಕರಿಸಿ. ಚೆನ್ನಾಗಿ ಪರೀಕ್ಷೆಯಲ್ಲಿ ಮಾಡು ಎಂದಷ್ಟೇ ಹೇಳಿ ಹರಸಿ. ಹೆಚ್ಚಿನ ಮಾತುಗಳು ಅವರಿಗೆ ಆತಂಕವನ್ನುಂಟು ಮಾಡಬಹುದು.
ಮಕ್ಕಳು ತಮ್ಮ ಮನಸ್ಸಿನಲ್ಲಿರುವ ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ. ಸಮಾಧಾನದಿಂದ ಅವರ ಮಾತುಗಳನ್ನು ಆಲಿಸಿ ಸೂಕ್ತವಾದ ಸಲಹೆಗಳನ್ನು ಸರಳ ಹಾಗೂ ಪ್ರೀತಿಯ ಮಾತಿನಿಂದ ತಿಳಿ ಹೇಳಿ. ಒಂದು ನೆನಪಿರಲಿ ನಮಗಿಂತಲೂ ನಮ್ಮ ಮಕ್ಕಳು ಬುದ್ಧಿವಂತರು ಎಂಬುದನ್ನು ನಾವು ಒಪ್ಪಲೇಬೇಕು. ನಾವು ಪೋಷಕರು, ನಾವು ಹೇಳಿದಂತೇ ನಡೆಯಬೇಕೆಂಬ ಧೋರಣೆಯನ್ನು ಬಿಟ್ಟಲ್ಲಿ ಮಕ್ಕಳು ನಮ್ಮೊಡನೆ ಸ್ನೇಹತ್ವದಿಂದ ಸುಲಭವಾಗಿ ಆಪ್ತ ಸಮಾಲೋಚನೆಯನ್ನು ಮಾಡುತ್ತಾರೆ. 
ಟಿವಿ, ಮೊಬೈಲ್‌ನಿಂದ ದೂರವಿರಿ

ದಯವಿಟ್ಟು ಪರೀಕ್ಷೆ ಮುಗಿಯುವವರೆಗೂ ಟಿವಿ, ಮೊಬೈಲ್‌ಗಳ ಸಹವಾಸದಿಂದ ದೂರವಿರಿ. ಕಾರಣ ಮನಸ್ಸು ಬಹಳ ಬೇಗ ಚಂಚಲಗೊಂಡು ಓದಿನ ಕಡೆಗೆ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಇದರ ನಿಯಂತ್ರಣ ನಿಮ್ಮ ಕೈಯಲ್ಲಿದೆ. ಪ್ರತಿ ನಿತ್ಯ ಓದಲು ಕುಳಿತುಕೊಳ್ಳುವ ಮೊದಲು ಮತ್ತು ನಂತರ ಧ್ಯಾನ ಮಾಡಿ ಏಕಾಗ್ರತೆಯನ್ನು ಗಳಿಸಿ. ಹಿತಮಿತವಾದ, ಅಮ್ಮ ಮಾಡಿದ ಆಹಾರವನ್ನೇ ಸೇವಿಸಿ. ಆರೋಗ್ಯವೇ ಭಾಗ್ಯ ಎಂಬುದು ಸದಾ ನೆನಪಿನಲ್ಲಿರಲಿ. ಕನಿಷ್ಠ 5–6 ಗಂಟೆ ನಿದ್ರೆ ಮಾಡಿ. ನೆನಪಿನ ಶಕ್ತಿ ಉಳಿದು, ಬೆಳೆಯುತ್ತದೆ. ಕುಟುಂಬದವರೊಡನೆ ಸ್ವಲ್ಪ ಸಮಯವಾದರೂ ನಗುವಿನೊಂದಿಗೆ ಮಾತಾಡಿ. ಅಮ್ಮನ ಸನಿಹ ನಿಮಗೆ ಅರಿವಿಲ್ಲದ ಶಕ್ತಿ ಕೊಡುತ್ತದೆ.
ರಾತ್ರಿ ಮಲಗುವ ಮುನ್ನ ಚೆನ್ನಾಗಿ ನೀರು ಕುಡಿಯುವುದರಿಂದ, ನಾವು ತೆಗೆದುಕೊಂಡ ಆಹಾರ ಚೆನ್ನಾಗಿ ಪಚನವಾಗುತ್ತದೆ, ಉಷ್ಣಾಂಶವನ್ನು ಹೊರಗೆ ಹಾಕುತ್ತದೆ ಅಲ್ಲದೆ ಬೆಳಿಗ್ಗೆ ಎದ್ದೇಳಲು ಸಹಾಯ ಮಾಡುತ್ತದೆ. ಇದೊಂದು ಒಳ್ಳೆಯ ಅಭ್ಯಾಸ.
ಒತ್ತಡ, ಆತಂಕ, ಭಯದ ಸ್ವಭಾವದಿಂದ ಮರೆವು ಹೆಚ್ಚಾಗುತ್ತದೆ. ಅದರ ಬದಲಿಗೆ ಸದಾ ಹಸನ್ಮುಖಿಯಾಗಿ ನಾನು ಖಂಡಿತ ಪರೀಕ್ಷೆಗೆ ಸಿದ್ಧನಾಗಿದ್ದೇನೆ, ಚೆನ್ನಾಗಿ ಬರೆಯಬಲ್ಲೆ ಎಂಬ ಉಲ್ಲಾಸದಿಂದ ಪರೀಕ್ಷೆಯನ್ನು ಎದುರಿಸಿ. 

Monday, February 11, 2019

ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಪೆರ್ವಾಜೆಯ ಪ್ರತಿಭೆಗಳು


   ದಿನಾಂಕ:-23-01-2019ರಂದು ವಂಡೇಲಾ ಹಾಲ್ ಗಂಜಿಮಟದಲ್ಲಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಿದ್ದು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಪೆರ್ವಾಜೆಯ ವಿದ್ಯಾರ್ಥಿಗಳಾದ ಮಾ| ಸಮೃತ್ 1 ಚಿನ್ನ, 1 ಬೆಳ್ಳಿ, ಮಾ| ಆಕಾಶ್ 1 ಚಿನ್ನ, 1 ಬೆಳ್ಳಿ, ಮಾ| ಅರುಣ್ 1 ಚಿನ್ನ, ಮಾ| ಚಿರಾಗ್ 1 ಕಂಚಿನ ಪದಕವನ್ನು ಪಡೆದಿರುತ್ತಾರೆ. ಇವರು ಕರಾಟೆ ಶಿಕ್ಷಕರಾದ ಶ್ರೀ ರಂಜಿತ್ ಎಸ್. ಕುಂದರ್ ಮುಂಡ್ಕೂರು ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮ


 ಸರಕಾರದಿಂದ ಕೊಡಮಾಡುವ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ವಿತರಣಾ ಕಾರ್ಯಕ್ರಮವು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ನಡೆಯಿತು. ಅತಿಥಿಗಳಾಗಿ ಶ್ರೀಮತಿ ಮಾಲಿನಿ ಜೆ. ಶೆಟ್ಟಿ-ಅಧ್ಯಕ್ಷರು ತಾಲೂಕು ಪಂಚಾಯತ್ ಕಾರ್ಕಳ, ಶ್ರೀ ವಿಜಯರಾಜ್ ಶೆಟ್ಟಿ-ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ, ಶ್ರೀ ಪ್ರದೀಪ್ ರಾಣೆ-ಸ್ಥಳೀಯ ಪುರಸಭಾ ಸದಸ್ಯರು, ಶ್ರೀಮತಿ ಕೆ. ಹರ್ಷಿಣಿ-ಮುಖ್ಯೋಪಾಧ್ಯಾಯರು, ಶ್ರೀ ಕಾಳಿದಾಸ-ಹಿರಿಯ ಸಹಶಿಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಶ್ರೀಮತಿ ಮಾಲಿನಿ ಜೆ. ಶೆಟ್ಟಿ ಇವರು ವಿದ್ಯಾರ್ಥಿಗಳಿಗೆ ಬೈಸಿಕಲನ್ನು ಹಸ್ತಾಂತರಿಸಿದರು. ಶ್ರೀಮತಿ ವೀಣಾ ಎ. ಕಾರ್ಯಕ್ರಮವನ್ನು ನಿರೂಪಿಸಿದರು.
04-02-2019 ಸೋಮವಾರ

ತಂತ್ರಜ್ಞಾನವನ್ನು ಬಳಸಿ ಮುನ್ನಡೆಯುವುದು ಅಗತ್ಯ ಮಾತ್ರವಲ್ಲ, ಅನಿವಾರ್ಯ: ರಾಜೆನ್ ಪಡುಕೋಣೆ




 ಮಣಿಪಾಲ ಫೌಂಡೇಶನ್ ಮತ್ತು ಮಹಾಮ್ಮಾಯ ಫೌಂಡೇಶನ್ ಆಶ್ರಯದಲ್ಲಿ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ    ದಿನಾಂಕ: 06-02-2019 ರಂದು ಬುಧವಾರ ಕನ್ನಡ ಸ್ಮಾರ್ಟ್ ಕ್ಲಾಸ್ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವು ವಿದ್ಯಾರ್ಥಿನಿಯರಾದ ಕು| ಅನಘ, ಕು| ಸಹನಾ, ಕು| ಶ್ರೀನಿಧಿ, ಕು| ಸುಷ್ಮಾ, ಕು| ಸೌಮ್ಯ ಇವರಿಂದ ಪ್ರಾರ್ಥನೆಯ ಮೂಲಕ ಆರಂಭಗೊಂಡಿತು. ಶ್ರೀಮತಿ ಕೆ. ಹರ್ಷಿಣಿ-ಮುಖ್ಯೋಪಾಧ್ಯಾಯರು ಪ್ರೌಢಶಾಲಾ ವಿಭಾಗ ಇವರು ಸರ್ವರನ್ನೂ ಸ್ವಾಗತಿಸಿ ಪ್ರಸ್ತುತ ವರ್ಷದಲ್ಲಿ ನಮ್ಮ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಚ್ರ್ಯುವಲ್ ಕ್ಲಾಸ್ ಸ್ಟುಡಿಯೋ ಆರಂಭಗೊಂಡಿದ್ದು ಅದರ ಪ್ರಯೋಜನವನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 14 ಸಂಸ್ಥೆಗಳು ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದರು. ಶ್ರೀಮತಿ ಉಷಾ ಪೈ-ಕಾರ್ಯದರ್ಶಿ ಮಹಮ್ಮಾಯ ಫೌಂಡೇಶನ್ ಮಣಿಪಾಲ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರಾರಂಭದಲ್ಲಿ 4 ಶಾಲೆಗಳಲ್ಲಿ ಆರಂಭಗೊಂಡ ವಚ್ರ್ಯುವಲ್ ಕ್ಲಾಸ್ ಇದೀಗ 80ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು ಉತ್ತಮ ಸಂಪನ್ಮೂಲ ಶಿಕ್ಷಕರಿಂದ ಪಾಠಗಳನ್ನು ನಡೆಸಲಾಗುತ್ತಿದೆ. ಇದರ ಪ್ರಯೋಜನವನ್ನು 8000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಡೆಯುತ್ತಿದ್ದು ಅತ್ಯುತ್ತಮ ಅಂಕಗಳನ್ನು ಗಳಿಸುವಲ್ಲಿ ತುಂಬಾ ಸಹಕಾರಿಯಾಗಿರುವುದು ಗಣನೀಯವಾಗಿ ಕಂಡು ಬರುತ್ತಿದೆ. 

ಸುಮಾರು 10ಕ್ಕಿಂತಲೂ ಹೆಚ್ಚು ವಚ್ರ್ಯುವಲ್ ಕ್ಲಾಸ್ ಸ್ಟುಡಿಯೋಗಳನ್ನು ಹೊಂದಿದ್ದು ಮಕ್ಕಳಿಗೆ ತರಗತಿಯ ಅವಧಿಗೆ ಅಡ್ಡಿಯಾಗದಂತೆ ಪೂರಕವಾಗಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಸಂಸ್ಥೆಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕನ್ನಡ ಮಾಧ್ಯಮದ ವಚ್ರ್ಯುವಲ್ ಕ್ಲಾಸ್‍ನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ರಾಜೆನ್ ಪಡುಕೋಣೆ-ಸಿಇಒ ಮಣಿಪಾಲ ಫೌಂಡೇಶನ್ ಬೆಂಗಳೂರು ಇವರು ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಮತ್ತು ಅದರ ಅಳವಡಿಕೆಯ ಮೂಲಕ ನಡೆಯುವ ವಚ್ರ್ಯುವಲ್ ತರಗತಿಗಳು ವಿದ್ಯಾರ್ಥಿಗಳ ಕಲಿಕೆಗೆ ತುಂಬಾ ಪೂರಕವಾಗಿದ್ದು ಮಹಾಮ್ಮಾಯ ಫೌಂಡೇಶನ್ ಈ ನಿಟ್ಟಿನಲ್ಲಿ ಮಹತ್ತರ ಕಾರ್ಯವನ್ನು ನಿರ್ವಹಿಸುತ್ತಿದೆ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವನ್ನು ವೃದ್ಧಿಸುವಲ್ಲಿ ಪೂರಕವಾಗಿದ್ದು ಕ್ಷಣದಲ್ಲಿಯೇ ಸಿದ್ಧವಾಗಿ ಅನಿಸಿಕೆಯನ್ನು ಹಂಚಿಕೊಂಡ ವಿದ್ಯಾರ್ಥಿನಿಯನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳ ಅನಿಸಿಕೆಯನ್ನು ಮೆಚ್ಚಿಕೊಂಡು ಈ ವಚ್ರ್ಯುವಲ್ ಕ್ಲಾಸ್ ಉದ್ದೇಶಿತ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿ ಉತ್ತಮ ಭವಿಷ್ಯವನ್ನು ಹಾರೈಸಿದರು. ಸಭೆಯ ಅಧ್ಯಕ್ಷರಾಗಿದ್ದ ಶ್ರೀ ವಿಜಯರಾಜ್ ಶೆಟ್ಟಿ-ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ಇವರು ನಮ್ಮ ಸಂಸ್ಥೆಗೆ ಇಂತಹ ಒಂದು ಸುವರ್ಣ ಅವಕಾಶವನ್ನು ಒದಗಿಸಿದ ಮಣಿಪಾಲ ಫೌಂಡೇಶನ್ ಮತ್ತು ಮಹಾಮ್ಮಾಯ ಫೌಂಡೇಶನ್ ಇದರ ಸಂಚಾಲಕರನ್ನು ಅಭಿವಂದಿಸಿದರು. ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀಮತಿ ನಿವೇದಿತಾ-ವಿಜ್ಞಾನ ವಿಷಯ ಪರಿವೀಕ್ಷಕರು ಇವರು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿರುವ ಈ ಸಂಸ್ಥೆಗಳಿಗೆ ಕೃತಜ್ಞತೆಯನ್ನು ಅರ್ಪಿಸುತ್ತಾ ಕಲಿಕೆಯಲ್ಲಿ ತಂತ್ರಜ್ಞಾನದ ಅವಶ್ಯಕತೆ ಮತ್ತು ವಿಶೇಷ ಪರಿಣಾಮದ ಕುರಿತು ತಿಳಿಸಿದರು. ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ ವಿದ್ಯಾರ್ಥಿಗಳು ಅತ್ಯಂತ ಸಂತಸವನ್ನು ಅಭಿವ್ಯಕ್ತ ಪಡಿಸುತ್ತಾ ವಚ್ರ್ಯುವಲ್ ತರಗತಿಯಲ್ಲಿನ ಪಿಪಿಟಿ ಪ್ರೆಸೆಂಟೇಶನ್, ಆ್ಯನಿಮೇಷನ್, ವೀಡಿಯೋಗಳ ಮೂಲಕ ಪಾಠದ ಬೋಧನೆಯ ಪರಿಣಾಮವನ್ನು ತಿಳಿಸಿದರು. ಶ್ರೀ ಶಿವಾನಂದ-ಶಿಕ್ಷಣ ಸಂಯೋಜಕರು ಇವರು ತಂತ್ರಜ್ಞಾನದ ಮಹತ್ವ ಮತ್ತು ತರಗತಿಯಲ್ಲಿ ಅದರ ಅಳವಡಿಕೆಯ ಅಗತ್ಯ ಮತ್ತು ಅನಿವಾರ್ಯತೆ ಕುರಿತು ತಿಳಿಸಿದರು., ಶ್ರೀಮತಿ ಲಕ್ಷ್ಮೀ ಹೆಗಡೆ-ಮುಖ್ಯೋಪಾಧ್ಯಾಯರು ಪ್ರಾಥಮಿಕ ವಿಭಾಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಉಷಾ ಪೈ-ಕಾರ್ಯದರ್ಶಿ ಮಹಮ್ಮಾಯ ಫೌಂಡೇಶನ್ ಮಣಿಪಾಲ ಇವರು ವಚ್ರ್ಯುವಲ್ ಕ್ಲಾಸ್‍ನಲ್ಲಿ ತೊಡಗಿಕೊಂಡಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳನ್ನು ಗೌರವಿಸಿದರು. ಶ್ರೀ ಉದಯ ಗಾಂವಕಾರ ಕಾರ್ಯಕ್ರಮವನ್ನು ನಿರೂಪಿಸಿದರು. ಆಧುನಿಕ ತಂತ್ರಜ್ಞಾನ ಯುಗದ ಅತ್ಯವಶ್ಯ ಅಂಗವಾಗಿ ಮೂಡಿಬಂದಿರುವ ವಚ್ರ್ಯುವಲ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮವೂ ಆಕರ್ಷಣೀಯವಾಗಿ ಮೂಡಿ ಬಂದಿದೆ.


ಫೋಟೋ: ದ್ವಾರಕಾ ನಿರಂಜನ್