ನಮ್ಮ ಶಾಲೆಯಲ್ಲಿ ನಡೆದ ಛದ್ಮವೇಷ ಸ್ಪರ್ಧೆ ಮತ್ತು ಲಘುಪ್ರಹಸನ ಸ್ಪರ್ಧೆಗಳು `ವಾಹ್ವ್’ ಎನ್ನುವಷ್ಟು ಚೇತೋಹಾರಿಯಾಗಿದ್ದವು.ಎಲ್ಲಕ್ಕಿಂತ ಮುಖ್ಯವಾಗಿ, ಅವರು ಆಯ್ದುಕೊಂಡ ವಸ್ತುವು ಅವರ ಚಿಂತನೆಯಲ್ಲಿನ ಪ್ರಬುದ್ಧತೆಯನ್ನೇ ಸೂಚಿಸುತ್ತಿದ್ದವು. ಇಂತಹ ಲಘುಪ್ರಹಸನಗಳನ್ನು ಅವರು ಯೂ ಟ್ಯೂಬ್ ವಿಡಿಯೋಗಳಿಂದ ಪ್ರಭಾವಿತರಾಗಿ ಹೆಣೆದಿರಬಹುದೆಂದು ಭಾವಿಸಿದರೂ ಅವರ ಆಯ್ಕೆಗಾಗಿ ಮೆಚ್ಚುಗೆ ಸೂಚಿಸಲೇಬೇಕು! ಇನ್ನೂ ಸೂಕ್ಷ್ಮವಾಗಿ ಗಮನಿಸುವುದಾದರೆ, ಪ್ರತಿ ಪ್ರದರ್ಶನದಲ್ಲೂ ಒಂದು ಬಗೆಯ ಸಾಂಸ್ಕೃತಿಕ ಪ್ರತಿರೋಧ ಢಾಳಾಗಿ ಕಾಣಿಸುತ್ತಿತ್ತು. ಒಂದು ಧರ್ಮದ ಆಚರಣೆ ಮತ್ತು ಆರಾಧನಾ ಕ್ರಮಗಳನ್ನು ಇನ್ನೊಂದು ಧರ್ಮಕ್ಕೆ ಸೇರಿದ ಮಗು ರಂಗದ ಮೇಲೆ ತರುವಾಗ ಮಗುವಿನ ಮನೋಭಿತ್ತಿಯಲ್ಲಿ ಧರ್ಮದ ಗಡಿಗಳೆಲ್ಲ ಅಸ್ಪಷ್ಟಗೊಳ್ಳುತ್ತಾ ಹೋಗುತ್ತವೆ.
ಸಾಂತಾಕ್ಲಾಸ್ ಆಗಿ ಮಕ್ಕಳಿಗೆ

ನಮ್ಮ ಇಷ್ಟ ಮತ್ತು ಆಧ್ಯತೆಗಳನ್ನು ಮಾರ್ಪಡಿಸುತ್ತಾ ಲೋಕದ ಜನರನ್ನೆಲ್ಲ ಕೊಳ್ಳುಬಾಕರನ್ನಾಗಿ ಮಾಡುವ ವ್ಯಾಪಾರಿ ಹುನ್ನಾರಗಳು ಜಾಹಿರಾತುಗಳ ರೂಪತಳೆದು ನಮ್ಮೆದುರು ಎಲ್ಲವನ್ನೂ ಒದಗಿಸುವ ಅಲ್ಲಾದೀನ್ ನ ಮಾಯದ ದೀಪದಂತೆ ಕಾಣುವುದು ಸುಳ್ಳಲ್ಲ. ಇಂತಹ ವ್ಯಾಪಾರಿ ಹುನ್ನಾರಗಳಿಗೆ ಇಂಬುಕೊಡುವ ಮಾಧ್ಯಮಗಳು ಕೂಡಾ ನಮ್ಮ ಮಕ್ಕಳ ಪ್ರಹಸನದಲ್ಲಿ ವ್ಯಂಗ್ಯದ ಮೊನೆಯಲ್ಲಿ ಚುಚ್ಚಿಸಿಕೊಂಡವು. ದುಡಿಯುವ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಸರಕಾರಿ ಪ್ರಯತ್ನಗಳು, ಜೀವದ ಹಂಗು ತೊರೆದು ದೇಶಕ್ಕಾಗಿ ಹೋರಾಡುವ ಸೈನಿಕರು, ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ತಾಯಿಯ ತ್ಯಾಗ ಹೀಗೆ ಬೇರೆ ಬೇರೆ ವಿಷಯಗಳನ್ನು ರಂಗದ ಮೇಲೆ ಹಿಡಿದಿಟ್ಟ ಎಲ್ಲ ಮಕ್ಕಳೂ ಅಭಿನಂದನಾರ್ಹರು.
No comments:
Post a Comment